Sunday, October 16, 2011

ಬೇಕಿದೆ ಸಹಜ ಆರೋಗ್ಯ ಸಾಧನೆ




ಬೇಕಿದೆ ಸಹಜ ಆರೋಗ್ಯ ಸಾಧನೆ


ಭಾನುವಾರ,೯ ಅಕ್ಟೋಬರ ೨೦೧೧ರಂದು  ಕನ್ನಡಪ್ರಭ ದಿನಪತ್ರಿಕೆಯ
‘ಸಂಪಾದಕರ ಸರದಿ’ ಯಲ್ಲಿ ಪ್ರಕಟವಾ ದ ಲೇಖನ:

-      ಶಿವಕುಮಾರ, ಸಂಪಾದಕ, ‘ಪ್ರಜೀವಾ’ ಮಾಸಪತ್ರಿಕೆ.
   ಭಾರತವು ಪರಕೀಯರ ಆಳ್ವಿಕೆಯಿಂದ ಸ್ವತಂತ್ರವಾಗಿ ೬೪ ವರ್ಷಗಳೇ ಸಂದವು. ವೈಜ್ಞಾನಿಕ, ತಾಂತ್ರಿಕ, ಆರ್ಥಿಕ ಪ್ರಗತಿಯತ್ತ ದಾಪುಗಾಲು ಹಾಕುತ್ತಿರುವ ನಮ್ಮ ದೇಶ, ಆಹಾರ ಸ್ವಾವಲಂಬನೆ ಸಾಧಿಸಿದೆ. ಪ್ರಜಾಪ್ರಭುತ್ವವು ಪ್ರಜೆಗಳಿಗೆ ರಾಜಕೀಯ, ಧಾರ್ಮಿಕ, ಅಭಿವ್ಯಕ್ತಿ ಸ್ವಾತಂತ್ರ್ಯಗಳನ್ನಿತ್ತಿದ್ದು, ಸರಕಾರಗಳು ಆರೋಗ್ಯ ಸೇವೆಗಳನ್ನೊಳಗೊಂಡು ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿವೆ.ವಿಶ್ವ ಆರೋಗ್ಯ ಸಂಸ್ಥೆ “೨೦೦೦ಕ್ಕೆ ಎಲ್ಲರಿಗೂ ಆರೋಗ್ಯ” ಘೋಷಿಸಿ ದಶಕವೇ ಕಳೆದಿದೆ. ಈಗ ಭಾರತೀಯರ ಆರೋಗ್ಯ ಹೇಗಿರಬೇಡ!
  ನಮ್ಮ ಬುದ್ಧಿವಂತ ಯುವಜನರು ತಜ್ಞ ವೈದ್ಯರಾಗುತ್ತಿದ್ದು, ಮಹಾನಗರಗಳ ಮೂಲೆ ಮೂಲೆಗಳಲ್ಲಿ ಜನತೆಗೆ ಆರೋಗ್ಯ ಸೇವೆನೀಡಲು (?) ತಳವೂರುತ್ತಿದ್ದಾರೆ. ಬೀದಿ ಬೀದಿಗಳಲ್ಲಿ ಔಷಧದ ಅಂಗಡಿಗಳ, ಪಂಚತಾರಾ ಆಸ್ಪತ್ರೆಗಳ ವರೆಗೆ ವಿವಿಧ ಬಗೆಯ ಚಿಕಿತ್ಸಾಲಯಗಳದೂ ಹೆಚ್ಚುತ್ತಲೇ ಇರುವ ರೋಗಿಗಳ ಸೇವೆಗೆ ಪೈಪೋಟಿ. ಯಂತ್ರೋಪಕರಣಗಳ, ಶಸ್ತ್ರಚಿಕಿತ್ಸೆಗಳ ಭರಾಟೆ. ಹೀಗಿದ್ದೂ, ಪರಿಪೂರ್ಣ ಆರೋಗ್ಯವಂತರು ಈಗ ಯಾಕಿಲ್ಲ? ನಾವು ದುಡಿದುದರ ಬಹುಭಾಗ ಚಿಕಿತ್ಸೆಗಳಿಗೇಕೆ ಮೀಸಲು? ಭಯಾನಕ ರೋಗಗಳ ಸಂಖ್ಯೆ ಹೆಚ್ಚುತ್ತಿರುವುದು, ಮಾಯವಾದವೆನ್ನಲಾದ ಸಾಂಕ್ರಾಮಿಕ ರೋಗಗಳು ಮತ್ತೆ ತಲೆಯೆತ್ತುತ್ತಿರುವುದು ಯಾವುದರ ದಿಕ್ಸೂಚಿ? ಸ್ವಾಸ್ಥ್ಯ  ಸ್ವಾವಲಂಬನೆ ಸಾಧ್ಯವಾಗುತ್ತಿಲ್ಲವೇಕೆ?
  ಮೈ ಬಗ್ಗಿಸದೆ ಹೇಗಾದರೂ ಪೈಪೋಟಿಯಿಂದ ಹೆಚ್ಚು ಸಂಪಾದಿಸುವುದು, ತಲೆಮಾರುಗಳಿಗಾಗುವಷ್ಟು ಕೂಡಿಡಲು ಹೆಣಗುವುದು, ಅತಿಯಾಗಿ ಬಳಸುವುದು, ಇತರರೆದುರು ತೋರ್ಪಡಿಸುವುದು ಆಧುನಿಕ ಜೀವನದ ಗೀಳುಗಳಾಗಿವೆ. ಇವು ಪರಿಸರವನ್ನು ಹಾಳುಗೈದು, ಸಾಮಾಜಿಕ ಅಸಮತೋಲನವನ್ನುಂಟುಮಾಡುವುದರೊಂದಿಗೆ ವ್ಯಕ್ತಿಯ ಮಾನಸಿಕ ಸ್ವಾಸ್ಥ್ಯವನ್ನೂ ಕುಂದಿಸುತ್ತವೆ. ಚಿಂತೆ, ಭಯ, ಆತಂಕ, ಒತ್ತಡಗಳಿಂದ ನಿದ್ರೆ, ವಿಶ್ರಾಂತಿಯ ಅಭಾವವುಂಟಾಗುತ್ತದೆ. ಇಂದ್ರಿಯಗಳನ್ನು ತೃಪ್ತಿಪಡಿಸುವ ವ್ಯರ್ಥ ಪ್ರಯತ್ನದಲ್ಲಿ ನರದೌರ್ಬಲ್ಯವುಂಟಾಗುತ್ತದೆ. ಕೃಷಿಯಲ್ಲಿ ಅತಿಯಾಗಿ ರಾಸಾಯನಿಕಗಳ ಬಳಕೆಯಿಂದ ಭೂಮಿ ಬಂಜರಾಗುತ್ತಾ  ಹೋಗುವುದಲ್ಲದೆ, ಆಹಾರೋತ್ಪನ್ನಗಳು ಸತ್ವಹೀನವೂ, ವಿಷಯುಕ್ತವೂ ಆಗುತ್ತಿವೆ. ಇವನ್ನೂ ಅನೈಸರ್ಗಿಕವಾಗಿ ಸಂಸ್ಕರಿಸಿ, ರಾಸಾಯನಿಕ ಬಣ್ಣ, ರುಚಿಕಾರಕಗಳು ಮತ್ತು ಪರಿರಕ್ಷಕಗಳನ್ನು ಬಳಸಿ ಕಾಯ್ದಿಟ್ಟು, ಆಕರ್ಷಕ ಪ್ಯಾಕಿಂಗ್ ನೊಂದಿಗೆ ಮಾರಲಾಗುತ್ತದೆ. ಜನರಿಗೆ ಪರಂಪರಾಗತ ಆಹಾರಕ್ಕಿಂತಲೂ, ಫಾಸ್ಟ್ ಫುಡ್, ಜಂಕ್ ಫುಡ್ ಗಳು ಫ್ಯಾಶನ್ನಾಗಿವೆ. ಬಿಳಿ ವಿಷಗಳಾದ ಪಾಲಿಶ್ ಮಾಡಿದ ಅಕ್ಕಿ, ಮೈದಾ, ಬಿಳಿ ಸಕ್ಕರೆ, ಡಾಲ್ಡಾ, ರಿಫೈಂಡ್ ಆಯಿಲ್,  ಹೈಬ್ರಿಡ್ ಹಸುಗಳ – ಡೈರಿಯಲ್ಲಿ ಪ್ಯಾಶ್ಚರೈಸ್ ಆಗಿ ದೊರೆಯುವ ಹಾಲು(ಳು?) ಮುಂತಾದವುಗಳ ಬಳಕೆ ಈಗ ವ್ಯಾಪಕವಾಗಿದೆ. ಇನ್ನು ಸಕ್ಕರೆಯ ಸಿಹಿ ತಿನಿಸು, ಬೇಕರಿ ಉತ್ಪನ್ನಗಳು, ಐಸ್ ಕ್ರೀಂ, ಚಾಕಲೇಟ್, ಬಿಸ್ಕತ್, ಪಿಜ್ಜಾ, ಚಾಟ್ಸ್, ಚ್ಯೂಯಿಂಗ್ ಗಮ್, ಕೋಲಾ, ಕಾಫಿ, ಚಹಾ, ಮಾಂಸ, ಮದಿರೆ, ಡ್ರಗ್ಸ್ ಇವುಗಳೆಲ್ಲಾ ಹಾನಿಕರವೆಂದು ಹಲವರಿಗೆ ಅನಿಸುವುದಿಲ್ಲವಾದರೆ, ಕೆಲವರಿಗೆ ಇವನ್ನು ಬಿಡಲಾಗುವುದಿಲ್ಲ. ಕೃತಕ ಬಟ್ಟೆಬರೆ, ಸೌಂದರ್ಯ ಸಾಧನಗಳು, ಸಾಬೂನು, ಡಿಟರ್ಜಂಟ್, ರಿಫ್ರಿಜರೇಶನ್, ಏರ್ ಕಂಡೀಷನಿಂಗ್ ಗಳಿಂದಲೂ ಆರೋಗ್ಯನಾಶವಾಗುವುದೆಂದರೆ ಅರ್ಥವಾಗುವುದು ನಿಧಾನ. ರಾತ್ರಿ ಪಾಳಿ (ನೈಟ್ ಶಿಫ್ಟ್), ವಾಹನಗಳ ಅತಿ ಅವಲಂಬನೆಗಳೂ ಆರೋಗ್ಯವನ್ನು ಏರುಪೇರುಗೊಳಿಸುವುದು ಗಮನಕ್ಕೇ ಬಾರದು. ರೋಗ ಬಂದ ತತ್ಕ್ಷಣ ಔಷಧಿ, ಇನ್ಜೆಕ್ಷನ್ ಗಳ ಮೊರೆಹೋಗುವುದು ಇಂದು ಸಾಮಾನ್ಯ.
  ಇವುಗಳಿಗೆಲ್ಲಾ ಆರೋಗ್ಯಕರ ಬದಲಿ ವಸ್ತು, ವಿಧಾನಗಳ ಕಡೆಗೆ ಗಮನ ಹರಿಸಬೇಕಷ್ಟೆ. ಜನರು ತಿಳುವಳಿಕೆ ಹೊಂದಿ, ಸಂಘಟಿತರಾಗಿ ಕೇಳಿದರೆ ಯಾವುದೂ ಅಲಭ್ಯವಲ್ಲ. ಮನೆಮದ್ದು, ಹಿತ್ತಿಲ ಔಷಧಿ ಮರಳಿ ಬಳಕೆಗೆ ತರಬಾರದೆಂದಿಲ್ಲ.
  ವಿಪುಲ ಪ್ರಾಕೃತಿಕ ಸಂಪನ್ಮೂಲಗಳೂ, ಬಡ ನಿರಕ್ಷರಿ ಜನರೂ ತುಂಬಿದ ಭಾರತಕ್ಕೆ ಆಧ್ಯಾತ್ಮಿಕ ತಳಹದಿಯುಳ್ಳ ಪ್ರಕೃತಿ ಚಿಕಿತ್ಸಾ ಪದ್ಧತಿಯೇ ಅತ್ಯಂತ ಸೂಕ್ತ – ಎಂಬ ಸ್ಪಷ್ಟ ಕಲ್ಪನೆ ಗಾಂಧೀಜಿಯವರಿಗೆ ಇತ್ತು. ಆದರೆ ಇಂದು ಬೃಹದಾಕಾರವಾಗಿ ಬೆಳೆದುನಿಂತ (ವಿಷ) ಔಷಧೋದ್ಯಮವು ಸರಕಾರಗಳ ನೀತಿನಿಯಮಗಳನ್ನು ನಿಯಂತ್ರಿಸುತ್ತಿದೆ. ಪ್ರಭಾವೀ ಮಾಧ್ಯಮಗಳ ಜಾಹೀರಾತುಗಳಲ್ಲಿನ ಬೃಹತ್ ಉದ್ದಿಮೆಗಳ ಮೂಲಕ ಮಾರುಕಟ್ಟೆಯು ಜನರ ಆಹಾರ, ಜೀವನಕ್ರಮಗಳನ್ನು ಕೃತ್ರಿಮಗೊಳಿಸಿವೆ. ಪ್ರಕೃತಿಚಿಕಿತ್ಸೆಯ  ಸಾಧನಗಳಾದ ಪಂಚಮಹಾಭೂತ – ಮಣ್ಣು, ನೀರು, ಗಾಳಿ, ಅಗ್ನಿ (ಸೂರ್ಯಕಿರಣ),ಆಕಾಶ(ಉಪವಾಸ) - ಗಳಾದರೋ ಯಾರಿಗೂ ಧಿಡೀರ್ ಹೇರಳ ಸಂಪಾದನೆಗೆ ನೆರವಾಗುವುದಿಲ್ಲವಲ್ಲ!
  ನಿಮ್ಮನ್ನು ಗುಣಪಡಿಸುವ ಶಕ್ತಿ ನಿಮ್ಮೊಳಗೆಯೇ ಇದೆ, ಅದಕ್ಕೆ ಅವಕಾಶ ನೀಡಿ. ರೋಗ ನಿಮ್ಮ ಶತ್ರುವಲ್ಲ, ಅದು ನಿಮ್ಮ ಸ್ವಾಸ್ಥ್ಯಸ್ತರವನ್ನು ಮತ್ತೆ ಮೇಲೆತ್ತಲು ದೇಹದೊಳಗೆ ಮಿತಿಮೀರಿ ಸಂಗ್ರಹವಾದ ಕಲ್ಮಶವನ್ನು ಹೊರಹಾಕಿ ಸಹಕರಿಸುವ ರಕ್ಷಣಾತ್ಮಕ ಕ್ರಿಯೆ. ಪಂಚಭೂತಗಳಿಂದಾದ ಶರೀರವನ್ನು ಮರಳಿ ಸುಸ್ಥಿತಿಗೆ ತರಲು ಅವುಗಳನ್ನೇ ಬಳಸುವುದು ಸೂಕ್ತ. ಅತಿಯಾಗಿ ತಿನ್ನುವುದಕ್ಕಿಂತ, ಒಳಿತಾದುದನ್ನು ಹಿತ – ಮಿತವರಿತು, ಕ್ರಮದಂತೆ ಸೇವಿಸುವುದು ಒಳಿತು. ಹಸಿವಾಗದೆ ಉಣಬೇಡಿ. ದಿನಕ್ಕೆ ಉಂಡಷ್ಟು ಬಾರಿ ಸಮರ್ಪಕವಾಗಿ ಮಲವಿಸರ್ಜನೆಯಾಗುವುದನ್ನು ಖಚಿತಪಡಿಸಿಕೊಳ್ಳಿ. ಪ್ರಾಕೃತಿಕ, ಪೂರ್ಣ, ವಿಷರಹಿತ, ಸ್ಥಳೀಯ, ಋತುಮಾನದ, ವೈವಿಧ್ಯಮಯ, ಸಸ್ಯಷಡಂಗಗಳಿಂದಾದ, ಷಡ್ರಸಯುಕ್ತ, ಸುಸಂಯೋಜಿತ ಆಹಾರವೇ ನಮಗೆ ಯೋಗ್ಯ. ನಮ್ಮ ಆಹಾರ, ವಿಹಾರ, ಆಚಾರ, ವಿಹಾರ, ವ್ಯಾಯಾಮ, ವಿರಾಮಗಳಲ್ಲಿ ಸಮತೋಲನವಿರಲಿ. ದುಶ್ಚಟಗಳಿಂದ ದೂರವಿರಿ. ಸದಾ ಸತ್ಸಂಗ, ಸದ್ವಿಚಾರಗಳನ್ನು ಆಶ್ರಯಿಸಿ. ಸ್ಪರ್ಧೆಯಲ್ಲ – ಸಹಕಾರ ನಮ್ಮೊಳಗಿರಲಿ. ಎಂದಿಗೂ ಕೆಡುಕುಂಟುಮಾಡದಿರಿ. ಆರೋಗ್ಯಕರ ದಿನಚರ್ಯೆ, ಋತುಚರ್ಯೆಗಳು ನಮ್ಮವಾಗಿರಲಿ. ಕಟಿಸ್ನಾನ, ಅಭ್ಯಂಗಗಳು ಆರೋಗ್ಯ ರಕ್ಷಕ. ಕೈತೋಟದಲ್ಲಿ ಔಷಧೀಯಸಸ್ಯಗಳನ್ನು ಬೆಳೆಸಿ, ಬಳಸಿಕೊಳ್ಳಿ.
  ಆಧುನಿಕ ಯಂತ್ರಗಳ ದಾಸರಾಗದೆ, ಅವುಗಳ ಬಳಕೆಯನ್ನು ಮಿತಿಗೊಳಿಸಿ. ಜೊತೆಗೆ ಆಧ್ಯಾತ್ಮ ಸಾಧನೆಗೆ ರೂಪುಗೊಂಡ ಯೋಗಾಭ್ಯಾಸವನ್ನು ಕ್ರಮವರಿತು ಬಳಸಿಕೊಂಡರೆ ಇದು ಆರೋಗ್ಯ ರಕ್ಷಣೆಗೂ ಅಪಾರ ಕೊಡುಗೆ ನೀಡುವುದು.
  ಇಂತಹ ಸರಳ ಸೂತ್ರಗಳ ಮೂಲಕ  ಮಹಾತ್ಮಾ ಗಾಂಧೀಯವರಿಂದ ತೊಡಗಿ, ಇತ್ತೀಚೆಗೆ ವಿಧಿವಶರಾದ ಖ್ಯಾತ ಸಸ್ಯ ವಿಜ್ಞಾನಿ, ಮಹಾನ್ ಪ್ರಕೃತಿ ಚಿಕಿತ್ಸಕ ಡಾ. ಪಳ್ಳತ್ತಡ್ಕ ಕೇಶವ ಭಟ್ಟರ ವರೆಗೆ ಹಲವು ಮಹನೀಯರು ನಮಗಿತ್ತ ಮಾರ್ಗದರ್ಶನವನ್ನನುಸರಿಸಿ – ರೋಗ ಬಂದಾಗ ಪ್ರಕೃತಿ ಚಿಕಿತ್ಸೆಯನ್ನೂ, ಸದಾ ಆರೋಗ್ಯವಾಗಿರಲು ಪ್ರಾಕೃತಿಕ ಜೀವನ ಪದ್ಧತಿಯನ್ನೂ ಅಳವಡಿಸಿಕೊಂಡು – ಸ್ವಾಸ್ಥ್ಯ ಸ್ವಾವಲಂಬನೆಯತ್ತ ಸಾಗುವ ಸಾಧನೆ ನಮ್ಮದಾಗಬಾರದೆ? ಸಹಜ, ಸರಳ, ಸಾರ್ಥಕ ಬಾಳುವೆಗೆ ಸ್ವಾಸ್ಥ್ಯದ ಅಡಿಗಲ್ಲು ಅವಶ್ಯವಲ್ಲವೇ?
-      ಶಿವಕುಮಾರ, ಸಂಪಾದಕ, ‘ಪ್ರಜೀವಾ’ ಮಾಸಪತ್ರಿಕೆ.


ಪ್ರಜೀವಾದ ಅಕ್ಟೋಬರ ಸಂಚಿಕೆ ೧೧-೧೦-೨೦೧೧ ರಂದು ಅಂಚೆಗೆ ಹೋಗಿದೆ.

No comments:

Post a Comment