Saturday, December 7, 2013

ಪ್ರಜೀವಾವನ್ನು ಅಂಚೆಗೆ ಕಳಿಸಲು ನೀವೂ ನೆರವಾಗಿ!


ಪ್ರಜೀವಾದ ಇತ್ತೀಚಿನ ಕೆಲ ಸಂಚಿಕೆಗಳು


ಪ್ರಜೀವಾ ಪ್ರಚಾರ ಯೋಜನೆ



                   ಪ್ರಜೀವಾ ಪ್ರಚಾರ ಯೋಜನೆ
          ಪ್ರಜೀವಾವನ್ನು ಮೊದಲು ಅದು ಪ್ರಕಟವಾಗುತ್ತಿರುವ ಮೈಸೂರು ನಗರದ ಲಕ್ಷಾಂತರ ಮನೆಗಳಿಗೆ ಪರಿಚಯಿಸುವ ಮಹಾತ್ವಾಕಾಂಕ್ಷೆಯ ಯೋಜನೆಯಿದೆ.ಇದಕ್ಕಾಗಿ ಮನಮನೆಗೆ ಪ್ರಜೀವಾವನ್ನೊಯ್ದು ಚುಟುಕಾಗಿ, ಪರಿಣಾಮಕಾರಿಯಾಗಿ ಪರಿಚಯಿಸಿ ಪತ್ರಿಕೆಯ ಮಾರಾಟ ಮತ್ತು ಸ್ಪತ್ರಿಕೆಗೆ ಸದಸ್ಯತ್ವ ಸಂಗ್ರಹವನ್ನು ಆಕರ್ಷಕ ಕಮಿಷನ್ ಆಧಾರದಲ್ಲಿ ಕೆಲಸ ಮಾಡಲು ಆಸಕ್ತರು ಬೇಕಾಗಿದ್ದಾರೆ.
೧.ಪ್ರಾಮಾಣಿಕತೆ, ೨. ಪರಿಶ್ರಮ ೩. ಕಲಿಯಲು ಶ್ರದ್ಧೆ ಇರುವ ಯಾರಾದರೂ ನಮ್ಮನ್ನು ಸಂಪರ್ಕಿಸಬಹುದು.
ಕ್ಷೇತ್ರದಲ್ಲಿ ಪರೀಕ್ಷಾ ಮಾರಾಟ ಮಾಡಿದ್ದು ಉತ್ತೇಜಕ ಫಲಿತಾಂಶ ಕಂಡುಬಂದಿದೆ. ಪೂರ್ಣಕಾಲಿಕ ಕಾರ್ಯಕರ್ತರು ಪ್ರಾಮಾಣಿಕವಾಗಿ ವರ್ಷಕ್ಕೆ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸಬಹುದಾಗಿದೆ. ಮೈಸೂರು ನಗರದಲ್ಲಿ ಈ ಯೋಜನೆ ಸಫಲ ಸಾಕಾರಗೊಂಡಮೇಲೆ ರಾಜ್ಯದ ಇತರ ನಗರ, ಪಟ್ಟಣಗಳಿಗೂ ಇದನ್ನು ವಿಸ್ತರಿಸಬಹುದಾಗಿದೆ.

ಸುರುಳಿ



ಸುರುಳಿ
            ಪ್ರಜೀವಾದ ಪ್ರಧಾನ ಸಲಹೆಗಾರರಾಗಿದ್ದು ನಮ್ಮನ್ನು ಹಲವು ರೀತಿಗಳಲ್ಲಿ ಬೆಂಬಲಿಸುತ್ತಾ, ಪತ್ರಿಕೆಗೆ ಒಂದು ಭದ್ರವಾದ ತಾತ್ವಿಕ ಅಡಿಪಾಯ ಹಾಕಿಕೊಟ್ಟಿದ್ದ ವಿಶ್ವಚೇತನ, ಮಹಾನ್ ಮೇಧಾವಿ, ಬಹುಭಾಷಜ್ಞ, ಲಕ್ಷಾಂತರ ಸಸ್ಯಗಳನ್ನರಿತ ಸಸ್ಯವಿಜ್ಞಾನಿ, ನಾಡೀಶಾಸ್ತ್ರ ಪರಿಣತ, ಪ್ರಕೃತಿ ಚಿಕಿತ್ಸಕ, ಮಿಲಿಯಾಂತರ ಜನರಿಗೆ ಪ್ರಾಕೃತಿಕ ಆರೋಗ್ಯದ ಬೆಳಕನ್ನಿತ್ತ ಮಾನವತಾವಾದಿ, ಸರಳ ಸಜ್ಜನ ಡಾ|| ಪಳ್ಳತ್ತದ್ಕ ಕೇಶವ ಭಟ್ಟರು ೨೦೧೦ ಜುಲೈ ೨೫ ರಂದು ಅಮೆರಿಕಾದಲ್ಲಿ ತಮ್ಮ ೭೧ ನೆಯ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು. ಇದು ವಿಶ್ವದ ಮಾನವತೆಗೇ ತುಂಬಲಾರದ ನಷ್ಟ. ಪ್ರಜೀವಾ ಬಳಗಕ್ಕಂತೂ ಭಾರೀ ಆಘಾತ.
ಇಂತಹ ಅತಿವಿರಳ ಸಾಧಕರ ಜೀವನ ಸಾಧನೆಗಳನ್ನು ಅವರೊಡನೆ ಒಡನಾಡಿದ ಬಂಧು ಬಾಂಧವರು, ಸಹಪಾಠಿಗಳು, ಸಹಚರಿಗಳು, ಅವರಿಂದ ಉಪಕೃತರಾದವರು ಇವರೆಲ್ಲಾ ಕನ್ನಡ ಹಾಗೂ ಆಂಗ್ಲ ಭಾಷೆಗಳಲ್ಲಿ ಬರೆದ ಮನೋಜ್ಞ ಲೀಖನಗಳುಳ್ಳ ಅಮೂಲ್ಯ ಸಂಸ್ಮರಣ ಸಂಪುಟ ಸುರುಳಿಯು ಡಾ|| ಪಿ.ಕೆ.ಭಟ್ಟರ ಮಗಳಾದ ಡಾ|| ಸುಮಾ ಪ್ರಮೋದ್ ರವರ ಸಮರ್ಥ ಸಂಪಾದಕತ್ವದಲ್ಲಿ ೧೬ ವರ್ಣಮಯ ಪುಟಗಳಲ್ಲಿ ವರ್ಣಮಯವಾದ ಅಪರೂಪದ ಚಿತ್ರಗಳನ್ನೊಳಗೊಂಡು ೪೦೮ ಪುಟಗಳಲ್ಲಿ ಪ್ರಕಟವಾಗಿದೆ. (ಬೆಲೆ ರೂ.೨೪೦.) ಇದು ಒಂದು ಸುಂದರ, ಸ್ಮರಣೀಯ ಕಾರ್ಯಕ್ರಮದಲ್ಲಿ ಉಡುಪಿಯ ಎಂ.ಜಿ.ಎಂ.ಕಾಲೇಜಿನಲ್ಲಿ ೧೧ ಅಗೋಸ್ತು ೨೦೧೧ ರಂದು ಬಿಡುಗಡೆಯಾಗಿದೆ.

ದೇಶ, ದೇಹಗಳೊಳಗಿನ ಪರಿಸರವ ಕಾಯುವವರ್ಯಾರು?



ಕನ್ನಡಪ್ರಭ ದಿನಪತ್ರಿಕೆಯಲ್ಲಿ ೨೦೧೩ಅಕ್ಟೋಬರ ೨೨, ಭಾನುವಾರ ಪ್ರಕಟವಾದ ಲೇಖನ

ದೇಶ, ದೇಹಗಳೊಳಗಿನ ಪರಿಸರವ ಕಾಯುವವರ್ಯಾರು?

ಸಂಪಾದಕರ ಸರದಿ
            ರಾಸಾಯನಿಕ ಕೃಷಿಯಿಂದ ಉತ್ಪನ್ನವಾದ ವಿಷಮಯ ಆಹಾರವನ್ನೇ ಸೇವಿಸಬೇಕಾದ ಅನಿವಾರ್ಯತೆಗೆ ಸಿಲುಕಿದ, ಹಗಲಿರುಳೆನ್ನದೆ ಪಾಳಿಗಳಲ್ಲಿ ದುಡಿದು ಜೈವಿಕ ಗಡಿಯಾರವನ್ನೇ ಕೆಡಿಸಿಕೊಂಡ, ನರಕಪ್ರಾಯ ನಗರಗಳಲ್ಲಿ ಬದುಕುತ್ತಿರುವ ಜನರ ದೇಹ ಮನಸ್ಸುಗಳೂ ವಿಷಮಯ, ಒತ್ತಡಯುಕ್ತವಾಗಿದ್ದು, ಜನರಿಗೆ ಸ್ವಾಸ್ಥ್ಯವೆಂಬುದು ಕನಸಾಗಿದೆ. ಸೋರುವ ಮಾಡು, ಕಿತ್ತುಹೋದ ಕಿಟಕಿ ಬಾಗಿಲು, ಮನೆ ತುಂಬಾ ಕಸ, ಕೊಳೆ, ಬೇಡದ ಸಾಮಾನುಗಳು, ಜೇಡರ ಬಲೆ, ಧೂಳು, ಹೊಗೆ, ಕೆಟ್ಟ ವಾಸನೆ ಒಂದು ಕಡೆಯಾದರೆ ಇರುವೆ, ಜಿರಳೆ, ಸೊಳ್ಳೆ, ಇಲಿ, ಹೆಗ್ಗಣಗಳ ಓಡಾಟ. ಮಕ್ಕಳ ಕಿರುಚಾಟ, ವೃದ್ಧರ ಗೊಣಗಾಟ, ಗಂಡ ಹೆಂಡಿರ ಕಿತ್ತಾಟ ಮತ್ತೊಂದೆಡೆ. ಇಂತಹ ಪರಿಸರವೆಲ್ಲ ಮನೆಯಲ್ಲಿದ್ದಾಗ ಶಾಂತಿ, ನೆಮ್ಮದಿ, ಆರೋಗ್ಯ, ಅಭಿವೃದ್ಧಿ ಎಲ್ಲಿಂದ ಬರಬೇಕು? ನಮ್ಮ ದೇಶಕ್ಕೋ ಇಂದು ಗಡಿಯಲ್ಲಿ ಸದಾ ಗಡಿಬಿಡಿ. ಅತ್ತ ನಮ್ಮ ಸೈನಿಕರು ವೈರಿಗಳ ಗುಂಡೇಟಿಗೆ ಅಂಜದೆ ಹೋರಾಡುತ್ತಿದ್ದರೆ, ಇತ್ತ ಅವರಿಂದ ರಕ್ಷಿತರಾದ ಕೆಲವರು ಗುಂಡು ಹಾಕಿ ಕುಣಿಯುತ್ತಿದ್ದಾರೆ. ಹಲವರು ಫಿಕ್ಸಿಂಗ್ ಆಗಿರಲೂಬಹುದಾದ ಕ್ರಿಕೆಟ್ ವೀಕ್ಷಣೆಯಲ್ಲಿ ಕಾಲ ಕೊಲ್ಲುತ್ತಿರುತ್ತಾರೆ. ಭಯೋತ್ಪಾದಕರು ದೇಶದ ಒಳನುಗ್ಗಿ ಎಲ್ಲಿ ಯಾವಾಗ ಎರಗುವರೆಂದು ಹೇಳಲಾಗದು. ನಮ್ಮೊಳಗೆ ಅಂಥವರಿಗೆ ಆಶ್ರಯದಾತರಿದ್ದಾರೆ. ವೈರಿ ದೇಶಗಳಿಂದ ತರಬೇತಿ, ಬೆಂಬಲ ಪಡೆದು ಉಂಡ ಮನೆಗೆ ಎರಡು ಬಗೆಯಲು ತಯಾರಾಗುತ್ತಿರುವ ದೇಶದ್ರೋಹಿಗಳಿದ್ದಾರೆ. ಇಂತಹ ಕೆಲಸಗಳಿಗೆ ಹಣವೊದಗಿಸುವುದರೊಂದಿಗೆ ನಮ್ಮ ದೇಶದ ಆರ್ಥಿಕತೆಯನ್ನು ಅಸ್ಥಿರಗೊಳಿಸಲು ನಮ್ಮ ಹಣದ ನಕಲಿ ನೋಟುಗಳನ್ನು ಮುದ್ರಿಸಿ ಇಲ್ಲಿ ಚಲಾಯಿಸಲು ನೆರೆ ದೇಶದಲ್ಲಿ ಅಲ್ಲಿನ ಪ್ರಭುತ್ವವೇ ಅನುವಾಗಿದೆ. ನೆಲದ ಮೂರನೇ ಒಂದು ಭಾಗವಾದರೂ ಸಹಜ ದಟ್ಟಾರಣ್ಯದ ಹೊದಿಕೆಯಿರಬೇಕಿದ್ದಲ್ಲಿ, ನಮ್ಮಲ್ಲಿನ ಕಾಡು ಕಾಯಬೇಕಾದವರು ನಾವು ಓಡಾಡುವ ರಸ್ತೆಗಳ ಇಕ್ಕೆಲಗಳಲ್ಲಿ ಅಂತರ್ಜಲ ಹೀರಿ ನೆಲ ಬೆಂಗಾಡು ಮಾಡುವ, ಉಪಯುಕ್ತ ಫಲವನ್ನೀಯದ, ಪಶುಪಕ್ಷಿ, ಕ್ರಿಮಿಕೀಟಗಳೊಂದಕ್ಕೂ ಆಶ್ರಯವಾಗದ ಅಕೇಶಿಯಾ, ನೀಲಗಿರಿ ಮತ್ತು ಗಾಳಿ/ ಸರ್ವೇ ಮರಗಳನ್ನು ನೆಟ್ಟು, ದಟ್ಟ ಕಾಡುಗಳನ್ನು ತೆಳುವಾಗಿಸುವವರಿಗೆ ನೆರವಾಗುತ್ತಾ, ಕೆಲವೇ ಮಂದಿಯ ಜೇಬು ದಪ್ಪವಾಗಿಸುತ್ತಾ ಸಾಗಿದ್ದಾರೆ. ತಮ್ಮ ಪಾಡಿಗೆ ಬೆಟ್ಟಗಳಿಂದ ಬಯಲುದಾರಿಯಾಗಿ ಸಮುದ್ರ ಸೇರುತ್ತಿದ್ದ ಪವಿತ್ರ ನದಿಗಳಿಗೆ ನಗರ, ಕಾರ್ಖಾನೆ, ಕಸಾಯಿಖಾನೆಗಳ ಕಲುಷಿತವನ್ನೆಲ್ಲಾ ಯಾವ ಪಾಪ ಭೀತಿಯೂ ಇಲ್ಲದೆ ಸೇರಿಸಲಾಗುತ್ತಿದೆ. ಸಾಲದ್ದಕ್ಕೆ ಇವುಗಳಿಗೆ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ, ಅವುಗಳೊಳಗೆ ಎತ್ತಲಾಗದಷ್ಟು ಹೂಳು ತುಂಬಿಸುತ್ತಿದ್ದೇವೆ. ಅವುಗಳಿಗಾಗಿ ಜನವಸತಿ, ಕೃಷಿಭೂಮಿ, ಅರಣ್ಯಗಳ ನಾಶ ಬೇರೆ. ಇನ್ನು ದೇಶದ ನದಿಗಳನ್ನೆಲ್ಲ ಜೋಡಿಸುವ, ನದಿ ಹರಿಯುವ ದಿಕ್ಕನ್ನೇ ಬದಲಿಸುವ ಸಹಸ್ರಾರು ಕೋಟಿ ರುಪಾಯಿ ಖರ್ಚಿನ ಹುಚ್ಚು ಯೋಜನೆಗಳೂ ರೂಪುಗೊಳ್ಳುತ್ತಿವೆ. ರಚನೆ, ರಿಪೇರಿಗಳಾಗಿ ಅನತಿಕಾಲದಲ್ಲೇ ಹಳ್ಳ ಬೀಳುವ ರಸ್ತೆಗಳು, ನೆಚ್ಚಿಕೊಳ್ಳಲಾಗದ ಸಾರ್ವಜನಿಕ ಸಾರಿಗೆಯಿಂದಾಗಿ ಅನಿವಾರ್ಯವಾದ, ಆದರೆ ನಗರಗಳಲ್ಲಿ ತಂಗಲು ಜಾಗ ಸಿಗದೆ ತೆವಳುವ ವೈಯುಕ್ತಿಕ ವಾಹನ ಸಂಕುಲ. ಇವುಗಳಿಗೆ ವಿದೇಶಗಳಿಂದ ಆಮದಾದ ದುಬಾರಿ ತೈಲಗಳ ಬಳಕೆ. ರಸ್ತೆ ತುಂಬಾ ಅಗಾಧ ದಟ್ಟಣೆ, ವಿಷಮಯ ಹೊಗೆ, ಧೂಳು, ಪ್ಲಾಸ್ಟಿಕ್ ತ್ಯಾಜ್ಯ. ಇಕ್ಕೆಲಗಳಲ್ಲಿ ಕಾಂಕ್ರೀಟ್ ಕಾಡು ನಮ್ಮನ್ನು ಆವರಿಸಿದೆ. ಕೃಷಿ ಭೂಮಿಯನ್ನು ಲಾಗಾಯ್ತಿನಿಂದ ಫಲವತ್ತಾಗಿಸುತ್ತಿದ್ದದ್ದು ಗೋಮಯ ಗಂಜಲಗಳು. ಇವನ್ನೀಯುತ್ತಿದ್ದ ದೇಶಿಯ ಗೋತಳಿಗಳಿಂದ ದೊರೆಯುತ್ತಿದ್ದ ಹಾಲು ಹೈನ ಜನರ ಆರೋಗ್ಯ ರಕ್ಷಿಸಿ, ಸುಪೋಷಣೆ ಒದಗಿಸುತ್ತಿದ್ದವು. ಅಂದು ಗೋವುಗಳನ್ನು ಮೇಯಿಸಲು ಗೋಮಾಳ, ಗೋ ಚರಾವುಗಳಿರುತ್ತಿದ್ದವು. ಇಂಚಿಂಚು ಭೂಮಿಗೂ ಅಪಾರ ಬೆಲೆ ಬಂದು ಈಗ ಅವೂ ಇಲ್ಲ. ಇನ್ನು ಕಟ್ಟಿ ಹಾಕಿಯೇ ಸಾಕಬಹುದಾದ, ಯಂತ್ರದಿಂದ (ಹಾಳು) ಹಾಲು ಹಿಂಡಬಹುದಾದ ಸೀಮೆಹಸುಗಳೆಂಬ ಪ್ರಾಣಿಗಳ, ಬಹುಬಗೆಯ ಬಿಳಿ ದ್ರವಗಳನ್ನು ಸಂಗ್ರಹಿಸಿ, ಅತಿಯಾಗಿ ಸಂಸ್ಕರಿಸಿ, ಪರಿವರ್ತಿಸಿ, ಕಾಪಿಟ್ಟು, ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ತುಂಬಿ ವಿತರಿಸುವ ಕೇಂದ್ರೀಕೃತ ಡೈರಿಗಳು ಜನರಿಗೆ ಹಾಲಿನ ಮೇಲಿದ್ದ ನಂಬಿಕೆಯನ್ನೇ ಅಲುಗಾಡಿಸುತ್ತಾ, ಸ್ವಾಸ್ಥ್ಯ ಕೆಡಿಸುವ ವ್ಯವಸ್ಥೆಯ ಅಂಗಗಳಾಗಿವೆ. ದೇಶೀ ಗೋವುಗಳು ಸದ್ದಿಲ್ಲದೇ ಮಾಂಸದ ಮುದ್ದೆಗಳಾಗಿ ದೇಶವಿದೇಶಗಳ ಗೋಭಕ್ಷಕರ ಉದರ ಪೋಷಿಸುತ್ತಾ ಕಣ್ಮರೆಯಾಗುತ್ತಿವೆ. ವೈವಿಧ್ಯಮಯ ಸಸ್ಯಗಳ ವಿಶಿಷ್ಟ ನಾಟಿ ತಳಿಗಳ ಜಾಗದಲ್ಲಿ ರೈತರಿಗೆ ಭಾರಿ ಫಸಲನ್ನೀಯುವುದೆಂಬ ಆಸೆ ಹುಟ್ಟಿಸಿ ಹೈಬ್ರಿಡ್ ತಳಿಗಳ ಬೀಜಗಳನ್ನೀಯಲಾಯ್ತು. ಅವುಗಳಿಗೆ ಸಗಣಿ, ಗಂಜಲಗಳಿಲ್ಲದೆ, ಸಬ್ಸಿಡಿಯ ಭರಪೂರ ರಾಸಾಯನಿಕ ಗೊಬ್ಬರಗಳನ್ನು ಉಣಿಸಲಾಯ್ತು. ರೋಗ, ಕೀಟ ಬಾಧೆಗಳನ್ನು ಸಹಿಸಲಾರದ ಇಂತಹ ಬೆಳೆಗಳನ್ನು ರಕ್ಷಿಸಲು ಈವರೆಗೆ ಕಂಡು ಕೇಳರಿಯದ ಭಯಂಕರ ಹಾಲಾಹಲವನ್ನು ಸಿಂಪಡಿಸಲಾಯ್ತು. ಮಿಶ್ರಬೆಳೆ, ಬೆಳೆಗಳ ಆವರ್ತನೆ ತಪ್ಪಿಹೋಗಿ, ಲಾಭಕೋರ ಏಕಬೆಳೆ ಪದ್ಧತಿ ರೂಢಿಗೆ ಬಂತು. ಅಂಗಾಂಶ ಕೃಷಿ, ಜೈವಿಕ ತಂತ್ರಜ್ಞಾನ, ಜೀವಾಣು ಪರಿವರ್ತನೆಗಳಿಂದಲೂ ಕೃಷಿಗೆ ಸಹಾಯವಾಗುವ, ಅಧಿಕ ಆಹಾರೋತ್ಪಾದನೆಯ ಭರವಸೆಗಳನ್ನೀಯಲಾಗುತ್ತಿದೆ. ಇವೆಲ್ಲವುಗಳಿಂದ ಕೃಷಿಭೂಮಿ ಬರಡಾಗುತ್ತಾ ಸಾಗಿದೆ. ಪಶುಗಳಿಗೆ ಮೇವಿಲ್ಲದಾಗಿದೆ. ಆಹಾರ ವಿಷಪೂರಿತವಾಗಿದೆ. ನೀರೂ ದೋಷಿತವಾಗಿದೆ. ಕುಡಿಯಲು ಪ್ರಜೆಗಳಿಗೆಲ್ಲಾ ಶುದ್ಧ ನೀರನ್ನಾದರೂ ಒದಗಿಸಲು ನಮ್ಮ ಪ್ರಭುತ್ವಕ್ಕೆ ಈವರೆಗೆ ಸಾಧ್ಯವಾಗಿಲ್ಲ. ಬದಲಾಗಿ, ಎಲ್ಲೆಡೆ (ಆಮ್ಲೀಯವಾದ್ದರಿಂದಲೇ ವಿಷಕಾರಿಯಾದ) ಮೆದುಪಾನೀಯಗಳು, ಸಂಶಯಾತ್ಮಕ ಶುದ್ಧತೆಯ ಬಾಟಲು ನೀರು, ಬಗೆಬಗೆಯ ಮದಿರೆಗಳನ್ನು ಸುಲಭ ಲಭ್ಯವಾಗಿಸಲಾಗಿದೆ. ಜನತೆಯ ಮೂಲ ಅವಶ್ಯಕತೆಗಳ ಸಮರ್ಪಕ ಪೂರೈಕೆಗಿಂತ, ಶೋಕಿಗೆ, ಐಷಾರಾಮಿ ಬದುಕಿಗೆ ಬೇಕಾದ ವಸ್ತುಗಳ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ನೆಲದ ಮೇಲಿನ ಕಾಡು, ಗಾಳಿ, ನೆಲ, ನೀರನ್ನೆಲ್ಲ ಕೆಡಿಸಿದ್ದು ಸಾಲದೆಂಬಂತೆ, ಮಿತಿಮೀರಿದ ಗಣಿಗಾರಿಕೆಯಿಂದ ಭೂತಾಯಿಯ ಗರ್ಭವನ್ನೇ ಬಗೆದು ಅದಿರನ್ನು ವಿದೇಶಗಳಿಗೆ ಕಳಿಸಿ, ಸರಕಾರಕ್ಕೆ ನೀಡಬೇಕಾದ ಕರವನ್ನೂ ಕದ್ದು, ಕೆಲವೇ ಮಂದಿ ದಿಢೀರ್ ಆಗಿ ಅಪಾರ ಸಂಪತ್ತನ್ನು ಗಳಿಸುವ ಆತುರ ತೋರಿದರು. ಕಲ್ಲಿದ್ದಲು ಗಣಿಗಾರಿಕೆಯ ಗೊಂದಲ ಗೋಜಲು ನಡೆದೇ ಇದೆ. ವ್ಯಾಪಕ ಬಳಕೆಯ ದುಷ್ಪರಿಣಾಮಗಳ ಸಾಧ್ಯತೆಯನ್ನು ಪರಿಶೀಲಿಸದೆ, ಮೊಬೈಲ್ ಫೋನ್ ಬಳಕೆಯನ್ನು ಸರ್ವವ್ಯಾಪಿಯಾಗಿಸಲಾಗಿದೆ. ಇವುಗಳಿಗೆ ಬಳಸುವ ತರಂಗಾಂತರಗಳ ಹಂಚಿಕೆಯಲ್ಲಿನ ಅವ್ಯವಹಾರದ ಪ್ರಮಾಣವೂ ದಿಗಿಲು ಹುಟ್ಟಿಸುವಂತಹುದು. ದೇಶದ ಪರಿಸರವನ್ನು ಅಲಕ್ಷಿಸಿ, ದೇಶದ ಅಭಿವೃದ್ಧಿಗೆ ಬಳಸಬೇಕಾದ ಸಂಪತ್ತು ಕೆಲವೇ ಸ್ವಾರ್ಥಿ ವ್ಯವಹಾರಸ್ಥರ, ಅಧಿಕಾರಸ್ಥರ ಕೈಸೇರಿ, ವಿದೇಶೀ ಬ್ಯಾಂಕುಗಳಲ್ಲಿ ಅಗಾಧವಾಗಿ ಜಮೆಯಾಗುತ್ತಿವೆ. ಮಹಾ ಅಪಾಯ ತಂದೊಡ್ಡಬಹುದಾದ ಅಣುಶಕ್ತಿ ಕೇಂದ್ರಗಳಿಗೂ ಅವಕಾಶ ನೀಡಲಾಗಿದೆ. ಇನ್ನು ರಾಸಾಯನಿಕ ಕೃಷಿಯಿಂದ ಉತ್ಪನ್ನವಾದ ವಿಷಮಯ ಆಹಾರವನ್ನೇ ಸೇವಿಸಬೇಕಾದ ಅನಿವಾರ್ಯತೆಗೆ ಸಿಲುಕಿದ, ಹಗಲಿರುಳೆನ್ನದೆ ಪಾಳಿಗಳಲ್ಲಿ ದುಡಿದು ಜೈವಿಕ ಗಡಿಯಾರವನ್ನೇ ಕೆಡಿಸಿಕೊಂಡ, ನರಕಪ್ರಾಯ ನಗರಗಳಲ್ಲಿ ಬದುಕುತ್ತಿರುವ ಜನರ ದೇಹ ಮನಸ್ಸುಗಳೂ ವಿಷಮಯ, ಒತ್ತಡಯುಕ್ತವಾಗಿದ್ದು, ಜನರಿಗೆ ಸ್ವಾಸ್ಥ್ಯವೆಂಬುದು ಕನಸಾಗಿದೆ. ರೋಗಬಾರದಂತೆ ತಡೆಯುವ ಉದ್ದೇಶ ಹೇಳಿಕೊಳ್ಳುವ ಲಸಿಕೆಗಳ ಭರಾಟೆ ಹೆಚ್ಚುತ್ತಿದ್ದಂತೆ, ರೋಗಗಳ, ರೋಗಿಗಳ, ತೀವ್ರತೆ, ಸಂಖ್ಯೆಗಳು ಏರುತ್ತಿರುವುದೇ ಕಂಡುಬರುತ್ತಿದೆ. ಇನ್ನು ಮನೆ ಮದ್ದು, ಹಿತ್ತಲ ಗಿಡಗಳ ಜಾಗದಲ್ಲಿ, ಗುಳಿಗೆ, ಸೂಜಿಗಳೂ, ಬೆದರಿಸಿಯೂ ಮಾಡುವ ಶಸ್ತ್ರಕ್ರಿಯೆಗಳೂ ಜನರ ಅಲ್ಪ ಉಳಿತಾಯವನ್ನೂ ದೋಚುತ್ತಿವೆ. ರೋಗಲಕ್ಷಣಗಳನ್ನಷ್ಟೇ ತಾತ್ಕಾಲಿಕವಾಗಿ ಮರೆಮಾಚುವ ವಿಷಯುಕ್ತ ಔಷಧಗಳು ಹೊಸಹೊಸ ವಿಪರಿಣಾಮಗಳನ್ನೂ ತೋರುತ್ತಿವೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಹೂಡಿ ಕರ ನಿರಾಕರಣೆ ಮಾಡಿದ್ದರೆ, ಇಂದು (ಎಲ್ಲೋ ಕೆಲವೆಡೆ, ಕೆಲವರಿಗೆ ಮಾತ್ರ ಆಗುತ್ತಿದ್ದ) ಅಯೋಡೀನ್ ಕೊರತೆಯ ನೆವ ಹೇಳಿ ದುಬಾರಿ ಅಯೋಡೀನ್‌ಯುಕ್ತ ಉಪ್ಪನ್ನೇ ಮಾರಬೇಕೆಂಬ ಕರಾಳ ಶಾಸನ ಸ್ವತಂತ್ರ ಭಾರತದಲ್ಲಿದೆ. ದೂರದರ್ಶನವೆಂಬ ಮಾಯಾ ಪೆಟ್ಟಿಗೆಯ ಜಾಹಿರಾತಿನಿಂದ, ಮುಕ್ತ ಮಾರುಕಟ್ಟೆಯ ಮಾಲ್‌ಗಳಲ್ಲಿ ಸ್ವಾಸ್ಥ್ಯನಾಶಕ ಜಂಕ್ ಫುಡ್‌ಗಳ ಮಾರಾಟ ಜೋರಿದೆ. ಸಂಸ್ಕರಿತ, ರಾಸಾಯನಿಕಗಳಿಂದ ಸಂರಕ್ಷಿತ, ಬಾಟಲು ಡಬ್ಬಗಳಲ್ಲಿ ತುಂಬಿದ ಬಗೆಬಗೆಯ ಆಹಾರಗಳು ಮಾರುಕಟ್ಟೆಯಲ್ಲಿವೆ. ಆರೋಗ್ಯಕರ ತೃಣಧಾನ್ಯಗಳು, ಬೆಲ್ಲ, ತೆಂಗುಗಳ ಜಾಗದಲ್ಲಿ ಮೈದಾ  ಬೇಕರಿ ಉತ್ಪನ್ನಗಳು, ಬಿಳಿ ಸಕ್ಕರೆ ಸಿಹಿ ತಿಂಡಿಗಳು, ಸೋಯಾ ಹಿಟ್ಟು, ಪಾಮ್ ಆಯಿಲ್‌ಗಳು ವಿಜೃಂಭಿಸುತ್ತಿವೆ. ನಾರು ನೀರುಗಳ ಬಳಕೆ ಕುಗ್ಗಿ, ದೇಹ ಮಲಬದ್ಧತೆಗೀಡಾಗಿದೆ. ಎಲುಬು ದುರ್ಬಲವಾಗಿದೆ. ರೋಗಗಳು ವಿಪುಲವಾಗಿವೆ. ದಂತವೈದ್ಯರಿಗೂ ಹಬ್ಬವಾಗಿದೆ.ಸುಯೋಗ್ಯ, ನಿಸ್ವಾರ್ಥಿ, ದೇಶಾಭಿಮಾನಿ, ಧರ್ಮನಿಷ್ಠ ಪ್ರಭುತ್ವ ದೊರೆತರಷ್ಟೇ ದೇಶದ ಪರಿಸರ ಉಳಿದೀತು. ಹಿತಮಿತ ಸಹಜ ಆಹಾರ, ಪ್ರಕೃತಿ ಪರಿಸರ ಪ್ರಿಯತೆ, ಸರ್ವಭೂತ ಹಿತಚಿಂತನೆ, ಒತ್ತಡಮುಕ್ತ ವಿವೇಕಯುತ ಬದುಕು ನಡೆಸಲು ಸೂಕ್ತ ಮಾರ್ಗದರ್ಶನವಿದ್ದಾಗಲಷ್ಟೇ ಮಾನವರ ದೇಹ ಮನಸ್ಸುಗಳು ಸುಸ್ಥಿತಿಯಲ್ಲಿದ್ದಾವು. ಹೀಗಾದಾಗ ಮಾತ್ರ ನಾವು ಅರೋಗ್ಯ ನೆಮ್ಮದಿಗಳಿಂದಿದ್ದು, ನೈಜ ವೈಯುಕ್ತಿಕ ಹಾಗೂ ಸಾಮುದಾಯಿಕ ಅಭಿವೃದ್ಧಿ ಸಾಧಿಸಬಲ್ಲೆವು. 
                                        - ಶಿವಕುಮಾರ, ಸಂಪಾದಕರು, 'ಪ್ರಜೀವಾ' ಮಾಸ ಪತ್ರಿಕೆ